ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಕಟ್ಟಡದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರೀಯ ಲಾಂಛನ ಪ್ರತಿಮೆಯನ್ನು ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುಮಾರು 9,500 ಕೆಜಿ ತೂಕದ ಮತ್ತು 6.5 ಮೀಟರ್ ಎತ್ತರವಿರುವ ಕಂಚಿನ ಲಾಂಛನವನ್ನು ಅನಾವರಣಗೊಳಿಸಲಾಗಿದೆ. ಪ್ರಸ್ತುತ ಇರುವ ಸಂಸತ್ ಭವನದ ಸಮೀಪದಲ್ಲೇ ಸೆಂಟ್ರಲ್ ವಿಸ್ಟಾ ಹೆಸರಿನಲ್ಲಿ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವಾಗ್ತಿದೆ. ಮುಂದಿಂದ ವರ್ಷ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ವೇಳೆ ಮೋದಿ ಅವರಿಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್ ನೀಡಿದರು.
ಅಶೋಕ ಸ್ತಂಭದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿ…
ಭಾರತ ಸರ್ಕಾರ 1950ರ ಜ.26ರಂದು ಅಧಿಕೃತವಾಗಿ ಉತ್ತರ ಪ್ರದೇಶದ ಸಾರನಾಥದ ಅಶೋಕ ಸ್ತಂಭದಲ್ಲಿರುವ 4 ಮುಖಗಳ ಸಿಂಹವನ್ನು ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು.
ಈ ಲಾಂಛನವು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಎತ್ತು, ಆನೆ ಮತ್ತು ಸಿಂಹದ ಆಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಕೆತ್ತಲ್ಪಟ್ಟಿವೆ. ಇವುಗಳ ಜೊತೆಗೆ ಮಂಡೂಕ ಉಪನಿಷತ್ ನಲ್ಲಿ ಉಲ್ಲೇಖಿಸಿರುವ “ಸತ್ಯಮೇವ ಜಯತೇ” ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಲಾಗಿದೆ.