ಬೆಳಗಾವಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ.
ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಸಹೋದರ ಸಂಬಂಧಿಯಿಂದಲೇ ಶೇಖವ್ವ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದರಿಂದ ಕುಟುಂಬದವರು ಊರು ಬಿಟ್ಟಿದ್ದರು. ಆದರೆ ತಿಂಗಳಿಗೊಮ್ಮೆ ಪಡಿತರ ತರಲು ಶೇಖವ್ವಾ ಊರಿಗೆ ಬರುತ್ತಿದ್ದರು.
ಅದರಂತೆ ಬಂದಿದ್ದ ವೇಳೆ ಕಲಹಾಳ್ ಗ್ರಾಮದಲ್ಲಿ ಇರುವ ಮನೆಯ ಬಳಿಯಲ್ಲೇ ಆರೋಪಿ ಅಟ್ಯಾಕ್ ಮಾಡಿದ್ದು, ಕೊಡಲಿಯಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಹತ್ಯೆ ಆರೋಪಿ ಮಂಜುನಾಥ ಮಾದರನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.