ಕಾರವಾರ: ರಾಸಾಯನಿಕ ಸೋರಿಕೆಯಾದ ಪರಿಣಾಮ 12 ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಿಣಗಾದ ಆದಿತ್ಯ ಬಿರ್ಲಾ ಕಂಪೆನಿಯಲ್ಲಿ ನಡೆದಿದೆ.
ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 12 ಮಂದಿ ಕಾರ್ಮಿಕರು ಅನಿಲ ಸೋರಿಕೆಯಿಂದ ಅಸ್ವಸ್ಥತೆಗೊಂಡಿದ್ದು, ಎಲ್ಲರನ್ನೂ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕಂಪೆನಿಯ ಅಧಿಕಾರಿಗಳು ಸಹ ದೌಡಾಯಿಸಿದ್ದು ಕ್ಲೋರಿನ್ ಅನಿಲ ಸೋರಿಕೆಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಇನ್ನೂ ಹಲವು ಮಂದಿ ಕಾರ್ಮಿಕರು ಅಸ್ವಸ್ಥಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾರ್ಮಿಕರ ಕುಟುಂಬಸ್ಥರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.
ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರಾದ ನೀಲಕಂಠ(22), ಜಹಾನೂರ(20), ಕಮಲೇಶ ವರ್ಮಾ(22), ನಂದಕಿಶೋರ(21), ದೀಪು(28), ಅಜೀಜ್(23), ಕಲ್ಲು(37), ಸುಜನ್(26), ನಜೀದುಲ್ಲಾ(24), ಬೇಜನಕುಮಾರ್(27), ಕಿಶನ್ ಕುಮಾರ್(28) ಹಾಗೂ ಮೋಹಿತ ವರ್ಮಾ(21) ಅಸ್ವಸ್ಥಗೊಂಡವರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆದಿತ್ಯ ಬಿರ್ಲಾ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕ್ಲೋರಿನ್ ಸೋರಿಕೆಯಿಂದ ಮೃತಪಟ್ಟ ಘಟನೆ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಅಂತಹುದೇ ದುರಂತ ಸಂಭವಿಸಿದ್ದು, ಕಂಪೆನಿಯ ಕಾರ್ಮಿಕರ ಸುರಕ್ಷತೆಯ ಕುರಿತು ಪ್ರಶ್ನೆ ಹುಟ್ಟುಹಾಕಿದೆ.
ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದು, ವೈದ್ಯರ ತಪಾಸಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.