ಶಿರಸಿ: ವಾಲ್ಮೀಕಿ ನಿಗಮದಲ್ಲಾದ ಹಗರಣ ಹಾಗೂ ಮೂಡಾ ಹಗರಣಗಳನ್ನು ನೋಡಿದರೆ ಕಾಂಗ್ರೆಸ್ ತಾನು ಇದುವರೆಗೂ ಮಾಡಿರುವ ಎಲ್ಲಾ ಹಗರಣಗಳ ದಾಖಲೆಗಳನ್ನು ಮುರಿದಂತಾಗಿದೆ ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಶಿರಸಿ ನಗರದಲ್ಲಿ ಕರೆಯಲಾಗಿದ್ದ ಮಾದ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಮೈಸೂರು ಮುೂಡಾ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರು ಸ್ವತಃ ತಮ್ಮ ಪತ್ನಿ ಪಾರ್ವತಿ ಅವರಿಗೆ 14 ಸೈಟ್ಗಳನ್ನು ನೀಡುವ ಮೂಲಕ ಹೇಗೆ ಭ್ರಷ್ಟಾಚಾರಕ್ಕೆ ಕಾರಣೀಕರ್ತರಾಗಿದ್ದಾರೆ ಎನ್ನುವುದು ಈಗಾಗಲೇ ಜಗಜ್ಜಾಹೀರಾತಾಗಿದೆ. ಹೀಗಾಗಿ ಇದುವರೆಗೆ ಕಾಂಗ್ರೆಸ್ ಸರ್ಕಾರ ಹಿಂದೆಲ್ಲಾ ಮಾಡಿರುವ ಹಗರಣಗಳನ್ನು ಗಮನಿಸಿದಾಗ, ಸಿದ್ಧರಾಮಯ್ಯ ಅವರು ಆ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದಂತೆ ಕಾಣುತ್ತಿದೆ ಎಂದರು.
ಒಮ್ಮೆ ರಾಜ್ಯಪಾಲರು ಸ್ವತಃ ಮುಖ್ಯಮಂತ್ರಿಗಳೇ ಭಾಗಿಯಾಗಿರುವ ಹಗರಣಗಳ ತನಿಖೆಗೆ ಅನುಮತಿ ಕೊಟ್ಟು, ಹೈಕೋರ್ಟ್ ಸಹ ತನಿಖೆಯನ್ನ ಎತ್ತಿ ಹಿಡಿದ ಮೇಲೆ ಸಿದ್ಧರಾಮಯ್ಯ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕಾಗಿತ್ತು. ಹಿಂದೆ ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದವರು ರಾಜೀನಾಮೆ ನೀಡದಿದ್ದಲ್ಲಿ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದನ್ನ ಕೇಳಿದ್ದೇವೆ. ಇದು ಅವರಿಗೆ ಅನ್ವಯಿಸುವುದಿಲ್ಲವೇ?. ಇದು ಮುಖ್ಯಮಂತ್ರಿ ಸ್ಥಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತದ್ದಲ್ಲ ಎಂದು ಸಂಸದ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.