ಬೆಂಗಳೂರು: ವ್ಯಾಪಾರಸ್ಥೆ ಸೋಗಿನಲ್ಲಿ ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿಗೂ ಹೆಚ್ಚು ವಂಚನೆ ಎಸಗಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಂತರ ರೂಪಾಯಿ ಪಾವತಿಸದೇ ವಂಚಿಸಿದ ಮಾಜಿ ಸಚಿವರ ಸ್ನೇಹಿತೆಯನ್ನು ಪುಲಕೇಶಿ ನಗರದ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ವೇತಾಗೌಡ ಎಂದು ಗುರುತಿಸಲಾಗಿದೆ. ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು.
ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಶ್ವೇತಾ ಖರೀದಿಸಿದ್ದ 2.945 ಕೆಜಿ ಚಿನ್ನವನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆಗೆ, ಅಂಗಡಿ ಸಿಬ್ಬಂದಿ ತಲುಪಿಸಿದ್ದರು. ಶ್ವೇತಾ ಮಾಜಿ ಸಚಿವರ ಮನೆ ವಿಳಾಸವನ್ನೇ ಕೊಟ್ಟಿದ್ದಳು. ಈ ಸಂಬಂಧ ವರ್ತೂರು ಪ್ರಕಾಶ್ ಗೂ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಹೇಳಿ ಕೆಲ ಚಿನ್ನದ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು.