ದಾವಣಗೆರೆ: ಕೊಟ್ಟೂರೇಶ್ವರ ರಥೋತ್ಸವಕ್ಕೆ ಪಾದಯಾತ್ರೆ ಹೋಗುವವರು ಹಿಂದೆ ಭಕ್ತಿಭಾವದಿಂದ ಹೋಗುತ್ತಿದ್ದರು. ಈಗ ಭಕ್ತಿಭಾವ ಹೋಗಿದ್ದು, ಈಗ ಕೆಲವರು ಮೋಜು ಮಸ್ತಿಗೆ ಹೋಗುತ್ತಿರುತ್ತಿದ್ದು, ಇಂತಹ ಮನಃಸ್ಥಿತಿ ದೂರವಾಗಬೇಕು ಎಂದು ಹೆಬ್ಬಾಳು ಮಹಂತರುದ್ರೇಶ್ವರ ಸ್ವಾಮೀಜಿ ಅವರು ಸಲಹೆ ನೀಡಿದರು.
ಹೌದು, ಕೊಟ್ಟೂರು ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ 44ನೇ ವರ್ಷದ ಸಮಗ್ರ ಕೊಟ್ಟೂರು ಪಾದಯಾತ್ರೆಗೆ ನಗರದ ಬಕ್ಕೇಶ್ವರ ದೇವಸ್ಥಾನದಲ್ಲಿ ಸೋಮವಾರ ಚಾಲನೆ ನೀಡುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದ ಹೆಬ್ಬಾಳು ಮಹಂತರುದ್ರೇಶ್ವರ ಸ್ವಾಮೀಜಿ ಅವರು, ಕಲ್ಲು ಮುಳ್ಳುಗಳಲ್ಲಿ ನಡೆದು, ಮನಸ್ಸು ಪರಿವರ್ತನೆ ಆಗಿ ದುರ್ಗುಣ, ದುರಾಸೆ ಹೋಗಬೇಕು ಎಂಬ ಕಾರಣಕ್ಕೆ ಕೆಲವರು ಪಾದಯಾತ್ರೆ ಮಾಡುತ್ತಾರೆ. ಇನ್ನು, ಕೆಲವರು ಆರೋಗ್ಯ, ಸಂಪತ್ತು, ವಿವಾಹ, ಮಕ್ಕಳ ಭಾಗ್ಯ ಸೇರಿದಂತೆ ಅನೇಕ ಬಯಕೆ ಕರುಣಿಸುವಂತೆ ಬೇಡಿಕೊಂಡು ಪಾದಯಾತ್ರೆ ಹೋಗುತ್ತಾರೆ. ಹೀಗೆ ಎಲ್ಲರ ಹರಕೆಗಳನ್ನು ಕೊಟ್ಟೂರೇಶ್ವರ ನೆರವೇರಿಸಿಕೊಡುತ್ತಾನೆ ಎಂಬುದೇ ಭಕ್ತರ ನಂಬಿಕೆ ಎಂದು ಸ್ವಾಮೀಜಿ ತಿಳಿಸಿದರು.
ಕೊಟ್ಟೂರಿಗೆ ಹೋಗುತ್ತಿರುವ ಪಾದಯಾತ್ರಾರ್ಥಿಗಳ ಕಣ್ಣಿಗೆ ಕೊಟ್ಟೂರೇಶ್ವರ:
ಇನ್ನು, ಕೊಟ್ಟೂರಿಗೆ ಹೋಗುತ್ತಿರುವ ಭಕ್ತರಿಗೆ ದಾರಿಯುದ್ದಕ್ಕೂ ಪ್ರಸಾದ ಸೇವೆಯನ್ನು ಜನರು ಒದಗಿಸುತ್ತಾರೆ. ಪಾದಯಾತ್ರಾರ್ಥಿಗಳು ಅವರ ಕಣ್ಣಿಗೆ ಕೊಟ್ಟೂರೇಶ್ವರ ರೂಪದಂತೆ ಕಾಣುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೊಟ್ಟಿರುವ ಆಹಾರ, ಹಣ್ಣು ವ್ಯರ್ಥ ಮಾಡದೆ ಊಟಮಾಡಿ, ಹಸಿವಿಲ್ಲವಾದರೆ ಬೇರೆಯವರಿಗೆ ಕೊಡಿ. ಭಕ್ತಿಭಾವ ಇಟ್ಟುಕೊಂಡು ಪಾದಯಾತ್ರೆಗೆ ಹೋಗಿ ಎಂದು ಸ್ವಾಮೀಜಿ ತಿಳಿಸಿದರು.