ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿ ಬಿಜೆಪಿ ಅಭ್ಯರ್ಥಿಯಾಗಿ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೌದು, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಗೆ ತೆರೆಮರೆಯಲ್ಲಿ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಅವರು ಪ್ರಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಇದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆಧಿತ್ಯನಾಥ್ ಮೂಲಕ ಟಿಕೆಟ್ ಗೆ ಸ್ವಾಮೀಜಿ ಅವರು ಲಾಬಿ ನಡೆಸಿದ್ದು, ಬಿಜೆಪಿ ಪಕ್ಷದ ವರಿಷ್ಠರನ್ನು ಕಾಣಲು ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಹಿಂದೂ ಪರ ಸಂಘಟನೆಗಳ ಜೊತೆ ಸ್ವಾಮೀಜಿ:
ಹಿಂದೂ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಅವರು, ಯುವ ಬ್ರಿಗೇಡ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಚಕ್ರವರ್ತಿ ಸೂಲಿಬೆಲೆ ತಂಡದಲ್ಲಿ ಕೂಡ ಗುರುತಿಸಿಕೊಂಡಿದ್ದು, ಹಿಂದೂ ಗಣಪತಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಬಾಗಿಯಾಗಿದ್ದರು.
ಇನ್ನು, ರಾಜ್ಯದಲ್ಲಿ ಕೆಲವು ಮಠಾಧೀಶರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಸುಮಾರು ೫೦ ಜನ ಮಠಾಧೀಶರು ಚುನಾವಣೆಗೆ ಸ್ಪರ್ದಿಸಲಿದ್ದು , ಈ ಸ್ವಾಮೀಜಿಗಳನ್ನು ಗೆಲ್ಲಿಸಲು ನಾಗಾಸಾಧುಗಳು ಕೂಡ ಪ್ರಚಾರಕ್ಕೆ ಬರುತ್ತಾರೆ ಎನ್ನಲಾಗಿದೆ.
ಹಾಲಿ ಶಾಸಕ ಕರುಣಾಕರ ರೆಡ್ಡಿಗೆ ತಪ್ಪುವುದೇ ಟಿಕೆಟ್..?
ಈ ಹಿಂದೆ ಹರಪನಹಳ್ಳಿ ಕ್ಷೇತ್ರದದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಸ್ಪರ್ಧೆ ಮಾಡುವುದಾಗಿ ಸುದ್ದಿಯಾಗಿತ್ತು. ಈಗ ಹರಪನಹಳ್ಳಿ ಸಮೀಪದಲ್ಲಿರುವ ಹಿರೇಹಡಗಲಿ ಹಾಲಸ್ವಾಮಿ ಸಂಸ್ಥಾನದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿ ಅವರು ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ದಿಸಲಿದ್ದಾರೆ ಎನ್ನಲಾಗಿದೆ. ಆದರೆ ಹರಪನಹಳ್ಳಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಕರುಣಾಕರರೆಡ್ಡಿ ಅವರನ್ನು ತಪ್ಪಿಸಿ ಸ್ವಾಮೀಜಿ ಅವರಿಗೆ ಟೆಕೆಟ್ ನೀಡುವುದು ಸುಲಭದ ಮಾತಲ್ಲ .